Tuesday 18 August 2020

ಗೀತಳ ಗೀಚು



1.) ಬದುಕು ಬಣ್ಣಗಳಲ್ಲಿ....


2)ಕಲೆಗೆ ದೃಷ್ಟಿಯ ಪರಿವೆಯಿಲ್ಲ

ಅದು ದೃಷ್ಟಿಕೋನ ! 


3.)ಆಯಾಮದ ಅನುಮಾನ ಅನುಭೂತಿಗೇಕೆ ?


4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲಿತ್ತು

ನನಗೆ ಮಾತ್ರ ಅಂಕುಡೊಂಕಿನ ಸಾಲು ನೆಚ್ಚಿತು !


5.)ಪರಿಸರವಷ್ಟೇ ಸಮತೋಲನ, ಮಿಕ್ಕಿದ್ದೆಲ್ಲ ಆಂದೋಲನ.


6.)ಪಾತರಗಿತ್ತಿಯ ಪುಕ್ಕ ಹತ್ತಿದ ಪರಿವೆಗೆ ರೂಪಾಂತರದ ರೋಮಾಂಚನ


7.)ಜಟಿಲತೆಯ ಪಥದಲ್ಲಿ ಪುಟಿದೆದ್ದ ಚಿಟಿಕೆ ಕಿಡಿ

ಮತ್ತೆ ಚಡಪಡಿಸಿದಂತೆ!


8.)ಪರಿಸರದ ಸಮೀಕರಣಕ್ಕೆ ಪ್ರಮೇಯ ಬೇಕೆ ?


 9.)ಕಾಫಿಯ ಕೆನೆಯಲ್ಲಿ ಕಾಪಿಟ್ಟ ಕವಿತೆ ಕಹಿಯಾದರೂ, ಕಲೆಯೇ! 


10.)ಯಜ್ಞಕ್ಕೆ ಹವಿಸ್ಸಿದ್ದಂತೆ ಪ್ರಜ್ಞೆಗೆ ಪ್ರಾಣಾಯಾಮ


©️Geethalakshmi Kochi

Wednesday 24 June 2020

ನೆನಪುಗಳ ತೂಗುಯ್ಯಾಲೆ ತೂಗಿ...



ಬಾಲ್ಯದಿಂದ ಇಂದಿನ ವರೆಗೂ ಗೀತಳ ಅವಿಚಲಿತ ಅಥವಾ ಅಚಲ ಪ್ರೀತಿ ಎಂದರೆ ಉಯ್ಯಾಲೆ. ಯಾವುದೇ ಖುಷಿಗಳನ್ನು ಸಂಭ್ರಮಿಸುವುದಕ್ಕೆ ಅಥವಾ ದುಃಖವನ್ನು overcome ಮಾಡುವ ಪ್ರಯತ್ನಕ್ಕೆ , ಓದುವುದಕ್ಕೆ, ಚಿಂತಿಸುವುದಕ್ಕೆ ಇದಕ್ಕಿಂತ ನೆಚ್ಚಿನ ಜಾಗ ಇನ್ನೊಂದಿರಲಿಲ್ಲ.ಮೂರನೇ ತರಗತಿಯಲ್ಲಿ ಜೋಕಾಲಿಯಲ್ಲಿ ಕುಳಿತು ಬರೆದ ಕಾಪಿಯಲ್ಲಿ ಅಕ್ಷರ ದುಂಡು ದುಂಡಾಗಿಲ್ಲವೆಂಬ  ಕಾರಣಕ್ಕೆ rewrite this! ಎಂಬ ರಿಮಾರ್ಕ್ ಕೂಡ ಸಿಕ್ಕಿದೆ .

ಇಂಥಹಾ ಬಾಲ್ಯದ ಉಯ್ಯಾಲೆ ಎಂದರೆ ಅಂಗಡಿಯಿಂದ ತಂದದ್ದೇನೂ ಅಲ್ಲ. ಗೀತಳ ಕೊಠಡಿಯ ಹಿಂಭಾಗದ ಸೀತಾಫಲದ ಮರದ ಕೊಂಬೆಗೆ ಅವಳ ಅಮ್ಮನ ಹಳೆಯ ಸೀರೆಯಿಂದ ಅಪ್ಪ ಕಟ್ಟಿ ಕೊಟ್ಟದ್ದು. ಅವತ್ತೆ ಹೇಳಿದಂತೆ ಸಾಗುವಾನಿ ಮರ ಅವಳು ಮುದ್ದಿಸಿದಂಥದ್ದಾದರೆ , ಸೀತಾಫಲದ ಮರ ಅವಳನ್ನು ಮುದ್ದಿಸಿದ್ದು, ತೂಗಿದ್ದು, ಹಣ್ಣು ನೀಡಿದ್ದು.
....

ಇನ್ನು ಉಯ್ಯಾಲೆಯಲ್ಲಿ ಮಾಡಿದ ಕಸರತ್ತು ಅಂಥಿಂಥದ್ದಲ್ಲ. ನೆಲವನ್ನು ಮೆಟ್ಟುವ ರಭಸಕ್ಕೆ ಸುಮಾರು ಎದುರಿನ ರೆಂಬೆಗೆ ತಾಗುವಷ್ಟು ಮೇಲೆರುತ್ತಿತ್ತದು. ಪೂರ್ಣ ಮರವೇ ಅಲುಗಾಡುತ್ತಲು ಇತ್ತು.ಅದರ ಒಂದು ಭಾಗ ಮನೆಯ ಒಂದು ಭಾಗದ ಕಬ್ಬಿಣದ ಶೀಟ್ ಗೆ ತಾಗಿ ಶಬ್ದವೂ ಬರುತ್ತಿತ್ತು.
...
ಒಂದು ದಿನ ಆ ಜೋಕಾಲಿಯಲ್ಲಿ ಉಲ್ಟಾ ಮಲಗಿ ಗೀತಾ ಅದರಲ್ಲಿ ಸಿಕ್ಕಿ ಹಾಕಿಕೊಂಡದ್ದೂ ಇದೆ. ಉಸಿರೆಳೆಯಲು ಅಥವಾ ಯಾರನ್ನಾದರೂ ಕರೆಯಲು ಕೂಡ ಅವಳಿಗೆ ಅಂದು ಕಷ್ಟವಾಗಿತ್ತು. ಕೊನೆಗೆ ಅಮ್ಮ ಬಂದು ಬಿಡಿಸಿ ಜೋರು ಮಾಡಿದ್ದು ಕೂಡ ನಿಜ. ಇದರಿಂದ ಏನಾದರೂ ಉಪಯೋಗವೋ ಪ್ರಯೋಜನವೋ ಆಗಲಿಲ್ಲ ಎನ್ನುವಂಥದ್ದೂ ಅಷ್ಟೇ ನಿಜ.
ಶಾಲೆಯಿಂದ ಬಂದ ನಂತರ, ಶಾಲೆಗೆ ಹೋಗುವ ಮೊದಲು ಎಲ್ಲವೂ ಅವಳು ಸಾಧಾರಣ ಉಯ್ಯಾಲೆ ತೂಗುತ್ತಲೇ ಇರುತ್ತಿದ್ದಂಥವಳವಳು.ಇದಕ್ಕಾಗಿಯೇ ಓಡೋಡಿ ಶಾಲೆಯಿಂದ ಬಂದದ್ದೂ ಇದೆ. ಬೆಳಗ್ಗೆ ಬೇಗ ಏಳಲು ಒಂದು ಕಾರಣ ಇದೂ ಆಗಿತ್ತು.ಅಷ್ಟೇ ಏಕೆ , ಕಲೋತ್ಸವಗಳಂಥ ಸ್ಪರ್ಧೆಗಳಿಗೆ ತಯಾರಿ ಅಂದ್ರೆ ಹಾಡು, ಕಥೆ ಹೇಳುವುದು ,ಭಾಷಣಗಳ ತಯಾರಿಯಿಂದ ಪರೀಕ್ಷೆಗೆ ಓದುವ ಜಾಗವೂ ಇದೇ ಆಗಿತ್ತು.
Coolest work place ever ಅಲ್ವಾ?
...
ಈ ಉಯ್ಯಾಲೆ , ಮರ ಮತ್ತು ಸುತ್ತಲ ಪ್ರದೇಶ ಒಂದು ರೀತಿ ಅವಳ ಅಧಿಪತ್ಯದ ಜಾಗವಾಗಿತ್ತು ಎಂದರೆ ತಪ್ಪಾಗಲಾರದು. ಅದರಲ್ಲಿ ಇನ್ಯಾರಿಗಾದರೂ ತೂಗುವ ಆಸೆ ಏನಾದರೂ ಇದ್ದರೂ ಗೀತಳ ಸಮ್ಮತಿ ಬೇಕಿತ್ತು, ಸಾಧಾರಣವಾಗಿ ಅವಳು ಇಂಥ ಅನುಮತಿ ಕೊಡುತ್ತಿರಲಿಲ್ಲ.ಕೊಟ್ಟರೂ ಹೆಚ್ಚು ಹೊತ್ತು ತೂಗುವ ಅವಕಾಶ ಯಾರಿಗೂ ಇರುತ್ತಿರಲಿಲ್ಲ.ಇದರ ಬಗ್ಗೆ ತೀರ ಪೊಸೆಸಿವ್ ಎನ್ನುವಂಥ ಮನೋಭಾವ.


........

ಆದರೆ ಸುಮಾರು ಅವಳು ಆರನೇ ತರಗತಿ ಮುಗಿಸಿ ಏಳು ಶುರುವಾಗುವಷ್ಟರಲ್ಲಿ ಮನೆಯ ನವೀಕರಣ ಮಾಡುವ ತೀರ್ಮಾನ ಮಾಡಲಾಯಿತು. ಇಂಥದ್ದರಲ್ಲಿ ನಾಲ್ಕರಿಂದ ಐದು ಹೊಸ ಕೊಠಡಿಯ ನಿರ್ಮಾಣ ಕ್ಕೂ ಸಿಧ್ಧತೆ ಮಾಡಲಾಗಿತ್ತು.
ಪ್ಲಾನ್ ನ ಪ್ರಕಾರ ಸೀತಾಫಲದ ಮರವನ್ನು ಕಡಿಯುವುದು ಅನಿವಾರ್ಯವಾಗಿತ್ತು.
....
ಗೀತಳಿಗೆ ದುಃಖವಿದ್ದದ್ದು ನಿಜ, ಆದರೆ ಹೊಸ ರೂಮ್ ಸಿಗುತ್ತದೆ ಎನ್ನುವ ಆಮಿಷವೂ ಇತ್ತು.ಮನಸ್ಸಿನಲ್ಲಿ ಬೇಕು ಬೇಡಗಳ ಗೊಂದಲಗಳ ನಡುವೆ ಕೊನೆಗೆ ಮನೆಯವರೆಲ್ಲರ ನಿರ್ಧಾರದಂತೆ ಅದನ್ನು ಕಡಿಯಲಾಯಿತು. ಮನೆಯ ನವೀಕರಣವನ್ನೂ ಪೂರ್ತಿ ಮಾಡಲಾಯಿತು
ಮೊದಮೊದಲು ಹೀಗೆ ಹೊಸತನದ ಹುರುಪಿದ್ದರೂ ಅವಳಿಗೆ ತೀರಾ ಹತ್ತಿರವಾದ , ನೆಚ್ಚಿನ ಉಯ್ಯಾಲೆ ಮತ್ತು ಮರ ಇಲ್ಲವಾದ ವಿಚಾರ ಅವಳನ್ನು ನಿತ್ಯ ಕಾಡತೊಡಗಿತ್ತು ಅಥವಾ ಇಂದಿಗೂ ಕಾಡುತ್ತಿದೆ.
.....
ಎಂಟನೆಗೆ ವಸತಿಶಾಲೆಗೆ ಸೇರಿದ ಬಳಿಕ ರಜೆಯಲ್ಲಿ ಮನೆಗೆ ತೆರಳುವಾಗಲೂ ಅಂಗಳದಲ್ಲಿ ಎಲ್ಲದಕ್ಕಿಂತ ಮೊದಲು ಕಾಣುತ್ತಿದ್ದ ಸೀತಾಫಲ ಮರವಿರುತ್ತಿರಲಿಲ್ಲ. ಬದಲಿಗೆ ಕಿಟಕಿಯೊಂದು ಕಾಣುತ್ತಿತ್ತು..ಅದೂ ಸಾಧಾರಣ ಅಂಗಳದ ಧೂಳು ಬರಬಾರದೆಂಬ ಕಾರಣಕ್ಕೆ ಮುಚ್ಚಿರುತ್ತಿತ್ತು.
.....
ಈಗ ಆ ಉಯ್ಯಾಲೆ ಮತ್ತು ಮರ ಇಲ್ಲವಾಗಿ ಸುಮಾರು 9 ವರ್ಷಗಳು ಕಳೆದಿವೆ. ಗೀತಾ ಮಹಾನಗರ ಸೇರಿದ್ದಾಳೆ.
 ಅವಳ ಅಕ್ಕನ ಮಗು ಮನೆಯಲ್ಲಿ ಉಯ್ಯಾಲೆ ತೂಗುತ್ತಾಳೆ. ಅದರಲ್ಲಿ ಮಿಕ್ಕಿ ಮೌಸ್ನ ಚಿತ್ರವೂ ಇದೆ. ಬಹುಶಃ ಅವಳೂ  ಅದನ್ನು ಪ್ರೀತಿಸುತ್ತಾಳೆ ಅನಿಸುತ್ತದೆ.ಗೀತಾ ಪಾರ್ಕ್ ಗಾರ್ಡನ್ಗಳ ಉಯ್ಯಾಲೆ ತೂಗಲು ಅಲ್ಲಿ ಆಡುವ ಮಕ್ಕಳಿಲ್ಲದ ಸಮಯ ಅಂದರೆ ಬೆಳಗ್ಗೆ ತೆರಳುತ್ತಾಳೆ.
.......


ಆದರೆ ಅಮ್ಮನ ಸೀರೆಯಿಂದ ಸೀತಾಫಲದ ಮರಕ್ಕೆ ಕಟ್ಟಿದ ಜೋಕಾಲಿಯ ಅನುಭೂತಿ ಇಲ್ಲ. ಅಂದ್ರೂ  ಉಯ್ಯಾಲೆ ಗೀತಾಳಿಗೆ ಇಂದಿಗೂ ಪ್ರಿಯ.
ಯಾಕಿರಬಹುದು ? ಯೋಚಿಸಿದೆ.
ಒಳಮನಸ್ಸು ಉಸುರಿದ್ದು ಇಂತಿದೆ:ತೂಗುಯ್ಯಾಲೆ ದೂರ ದಿಗಂತವನೇರಿಸಿದಂತೆ
ಜೀವನ ಜೀಕಿ ಧರೆಯನು ಮೀಟಿ ಆಗಸದ ಅಂಶ ನಾನಾದರೆ, ಭೂಮಿಯ ಬಯಕೆ
ನನಗೇಕೆ...ನನ್ನ ದೃಷ್ಟಿಯಲ್ಲಿ ಸೃಷ್ಟಿ ಸಾರ್ವಭೌಮವೇಕೆ! ದೃಷ್ಟಿಕೋನ ಬದಲಿಸಿ ದಾರ್ಶನಿಕತೆಗೆ ದೃಷ್ಟಾಂತ ಬರೆಯಬಹುದೇನೋ..ನೀಲಿಯಲಿ ನಿರಂತರ ತೇಲಬಹುದೇನೊ!
ಗೀತಳೂ ಹೀಗೆ ಯೋಚಿಸಿರಬಹುದು ,ಬಹುಶಃ ಉಯ್ಯಾಲೆಯೂ💟





-Geethalakshmi Kochi

Tuesday 9 June 2020

Saga of ಸಾಗುವಾನಿ!

ಚಿತ್ರ ಕೃಪೆ : ಅಂತರ್ಜಾಲ

ನೇಪಥ್ಯಕ್ಕೆ ಸರಿದಿದ್ದ ಒಂದು ನೆನಪು ಇಂದು ಏಕಾಏಕಿ ನನ್ನ ಮನೆ ಮುಂದೆ , ಮನದ ಮುಂದೆ ಚಪ್ಪಲಿ ಕಳಚಿ ನಿಂತಂತಾಯಿತು.
ಈ ನೆನಪು ಐದು ವರ್ಷದ ಗೀತಳ  ಕನಸು. ಗೀಚದೆ ಉಳಿದದ್ದು.
.
ಕೃಷಿ ಕುಟುಂಬದ ಕುಡಿಯಾಗಿ ಬೆಳೆದ ಅಥವಾ ಬೆಳೆಯುತ್ತಿದ್ದ ಗೀತಳಿಗೆ ಗಿಡಗಳನ್ನು ಬೆಳೆಸುವುದು, ಅವುಗಳ ಜೊತೆಗೆ ಮಾತನಾಡುವುದು, ಅವಳು ನೆಟ್ಟ ಹೂಗಿಡದ ಹೂ ದೇವರಿಗೆ ಅರ್ಪಿಸಲು ಅಜ್ಜ ಕೀಳುವಾಗ ಸಿಡುಕುವುದು ಹೇಗಿದ್ದರೂ ಸಹಜತೆಯೇ ಆಗಿತ್ತು.
.

ಹೀಗಿರುವಾಗ ಕೇರಳ ಸರ್ಕಾರ ಪ್ರತಿ ಸರಕಾರಿ ಶಾಲೆಯ ಮಕ್ಕಳಿಗೆ ಪರಿಸರ ದಿನಾಚರಣೆಯ ಪ್ರಯುಕ್ತ ಒಂದೊಂದು ಗಿಡದಂತೆ ವಿತರಿಸಿತು. ಹೀಗೆ ಗೀತಳ ಪಾಲಿಗೆ ಸೇರಿದ್ದು ಒಂದು ಸಾಗುವಾನಿ ಗಿಡ.ಗೆಳೆಯರಿಗೆ ಹೆಚ್ಚಿನವರಿಗೂ ಡಿಸೆಂಬರ್ ಫ್ಲವರ್!!! ಸಾಗುವಾನಿ ಗಿಡಕ್ಕೆ ಹೋಲಿಸಿದರೆ ಉದ್ದವೂ ಹೆಚ್ಚಾಗಿತ್ತು. ! ಅವರಿಗೆ ಬೇಗ ಹೂ ಸಿಗುವ ಆಶಯವೂ ಇತ್ತು. ಆದರೆ ಪುಟ್ಟ ಸಾಗುವಾನಿ ಎಲ್ಲದಕ್ಕಿಂತ ಮುದ್ದಾಗಿತ್ತು.ಇದನ್ನು ಬೆಳೆಸ ಬೇಕಿದ್ದರೆ ಸಾಧಾರಣವಾಗಿ ಮಕ್ಕಳಿಗಿರುವ ನಾಲ್ಕೈದು ತಿಂಗಳಲ್ಲಿ ಫಲ ಪಡೆಯುವ ಆಶಯ ಬಿಡಬೇಕಿತ್ತು. ಮತ್ತು ಯಾವುದೇ ರೀತಿಯ ಝಿಲ್ಮಿಲ್ ಕನಸುಗಳು ಇರಬಾರದಿತ್ತು.ಅಥವಾ ಇನ್ನೊಂದು ಆಯ್ಕೆಯಾಗಿ ಸೀದಾ ಅಪ್ಪನ ಕೈಯಲ್ಲಿಟ್ಟು ಜವಾಬ್ದಾರಿ ಮುಗಿಸಬಹುದಿತ್ತು.
.
ಆದರೆ ಗೀತಾ ಆ ಗಿಡದ ಮಡಿಲಾಗ ಬಯಸುತ್ತಾಳೆ. ಗೆಳತಿಯಾಗಲಿಚ್ಛಿಸುತ್ತಾಳೆ. Long-term ಅಂದರೇನು ಎಂದರಿಯದ ವಯಸ್ಸಿನಲ್ಲಿ ಈ ಗಿಡ ಮರವಾಗುವ ಕನಸು ಕಾಣುತ್ತಾಳೆ, ಮತ್ತು ಆ ಕನಸಿನ ಮನಸ್ಸು ಸಾಗುವಾನಿಗೆ ಸರಿಯಾದ ನೆಲೆ ಮತ್ತು ನೆಲ ಹುಡುಕುತ್ತದೆ.
ಅಂಥಿಂಥಾ ಜಾಗವಲ್ಲ..ಅಂಗಳದ ಹೂ ದೋಟದಲ್ಲಿ ನೆಡುವಂತಿಲ್ಲ, ಕಂಗಿನ ತೋಟದಲ್ಲಿ ನೆಟ್ಟರೆ ಮುಂದೆ ಬೆಳೆದಾಗ ಅಡಿಕೆ ಮರಗಳಿಗೆ ತಾಗಿ ಹಬ್ಬಿ ಉಪದ್ರವವಾಗಿಬಿಡಬಹುದು. ಇನ್ನು ಮನೆಯ ಮೇಲ್ಬಾಗದ ತೆಂಗಿನ ತೋಟದಲ್ಲಿ ನೆಟ್ಟರೆ ಅದರ ಮೇಲೆ ದೃಷ್ಟಿ ಇಡುವುದು ಹೇಗೆ...ಅಲ್ಲವೇ...?
.
ಕೊನೆಗೆ ಅದಾಗ ತಾನೆ  ಸೋಪಾನವಾಗಿ ಪರಿವರ್ತಿಸಿದ ಒಂದು ಜಾಗವೇ ಈ ಗಿಡದ ನೆಲೆಯಾಗಲಿ ಎಂದು ತೀರ್ಮಾನವೂ ಆಯಿತು, ಮತ್ತು ಅದೇ ದಿನ ಜೋಪಾನವಾಗಿ ಅಪ್ಪ ಅಮ್ಮನ ಜೊತೆ ಗಿಡ ನೆಡಲಾಯಿತು. 
ಗಿಡ ಪುಟ್ಟದಾಗಿದೆ ಅಲ್ಲವೆ? ಆಗ ಅದರ ಮೇಲೆ ಮನೆ ಕೆಲಸದವರಾಗಲಿ , ಮಕ್ಕಳಾಗಲಿ ತಿಳಿಯದೆ ತುಳಿದು ಬಿಡಬಾರದು. ಹಾಗಾಗಿ ಅದರ ಸುತ್ತ ಉದ್ದುದ್ದದ ಕೋಲುಗಳನ್ನು ನೆಟ್ಟು ಒಂದು ಬೇಲಿಯನ್ನೂ ಕಟ್ಟಲಾಯಿತು.
.
ದಿನ ನಿತ್ಯದ ಜೀವನದ ಅಂಶವಾಗಿ ಗಿಡ ಬದಲಾದಾಗ ಇದೆಲ್ಲ ದಿನಚರಿಯ ಪುಟವನ್ನು ಸೇರತೊಡಗಿತು. ಸ್ವಪ್ನಾ ಟೀಚರ್ ಈ ದಿನಚರಿ ಅದೇ ಪ್ರೀತಿಯಿಂದ ಓದಿ #saga of ಸಾಗುವಾನಿಯ  ಭಾಗವಾಗದರು.

.

ಈ ಸಾಗುವಾನಿ ಗಿಡಕ್ಕೆ ಬೇರೇನೂ ಆರೈಕೆಯೂ ಬೇಕಿರಲಿಲ್ಲ.ಮಳೆಗಾಲವಾದ್ದರಿಂದ ಕನಿಷ್ಟ ಪಕ್ಷ ನೀರು ಕೂಡ ಅದಕ್ಕೆ ನೀಡುವ ಅಗತ್ಯ ನಮಗಿರಲಿಲ್ಲ. ಈಗಿನ ವರ್ತಮಾನ ಪರಿಸ್ಥತಿಯಲ್ಲಿ ಹೇಳುವುದಿದ್ದರೆ ಈ ಸಾಗುವಾನಿ ಗಿಡ ಆತ್ಮನಿರ್ಭರತೆಯ ಪ್ರತೀಕವಾದಂತಿತ್ತು. ಅಂದರೆ ಅದು ಯಾರಿಂದಲೂ ಏನನ್ನೂ ಬಯಸುತ್ತಲೇ ಇರಲಿಲ್ಲ. ಆದರೆ ಇದಕ್ಕಾಗಿ ಏನಾದರೂ ಮಾಡಲೆ ಬೇಕೆಂಬ ಅದಮ್ಯ ಆಸೆಯಾಗಿತ್ತು ಗೀತಳದು.
.
ಹೀಗಾಗಿ pampering the plant ಎಂದು ಅದಕ್ಕೆ ಗೊಬ್ಬರ ನೀಡಲಾಗುತ್ತಿತ್ತು. ದಿನ ನಿತ್ಯ ಮಾತನಾಡಲಾಗುತ್ತಿತ್ತು ಮತ್ತು ಶಾಲೆಯ ಕತೆಗಳನ್ನು ಕೇಳಿಸಲಾಗುತ್ತಿತ್ತು.ತನ್ನ ಕವಿತೆಗಳನ್ನು ಅದರ ಜೊತೆ ಹಂಚಲಾಗುತ್ತಿತ್ತು.
.

ಹೀಗೆ ಗಿಡದ ಪ್ರತಿ ಚಿಗುರಿಗೆ, ಎಲೆಯ ಸೌಂದರ್ಯಕ್ಕೆ , ಬೆಳೆಯುವ ಮೋಡಿಗೆ ಗೀತ ಕಣ್ಣಾದಳು, ನಗುವಾದಳು, ಸಂಭ್ರಮವಾದಳು.ಹುಳ ತಿಂದ ಎಲೆ ಕಂಡು ಆಗಾಗ ಅಳುವೂ ಆದಳು.ಅದರ ಜತನದ ಆಳಾದಳು.ಜೊತೆಗೆ ತಾನೂ ಬೆಳೆದಳು.ಆದರೆ ಗಿಡ ಬೆಳೆದು ಅವಳಿಗಿಂತ ಉದ್ದವಾಯಿತು. ಗೆಳೆಯರ ಹೂಗಿಡದ ಹೂ ಕಂಡರೂ ಈಗ ಗೀತಳಿಗೆ my tribe and vibe both are different ಅಂತ ತಿಳಿದಿತ್ತು.
.
ಗಿಡ ನಿರಂತರ ಬೆಳೆದು ಅವಳಿಗಿಂತ ಉದ್ದವಾದ ದಿನ ಅವಳಿಗಾದ ಸಂತಸ ಅಷ್ಟಿಷ್ಟಲ್ಲ.
ಹೀಗೆ ಬೆಳೆದ ಗಿಡ ಗಾಳಿಗೆ ಬಗ್ಗುತ್ತಿತ್ತು, ಇದಕ್ಕಾಗಿ ಕೋಲೊಂದನ್ನು ಇದಕ್ಕೆ ಆಧಾರವಾಗಿ ಕೊಡಲಾಯಿತು. ಅಜ್ಜನ ಮನೆಗೆ ತೆರಳುವಾಗ ಗಿಡದ ಕಾಯುವಿಕೆಯ ಹೊಣೆ ಮನೆಯ ಅಜ್ಜನ ಹೆಗಲೇರುತ್ತಿತ್ತು.ಇದರೆಡೆಯಲ್ಲಿ ಆ ಸೋಪಾನದಲ್ಲಿ ಮತ್ತೆ ಅಡಿಕೆ ಗಿಡ ನೆಡುವ ಕುರಿತು ಮಾತುಕತೆ ನಡೆದಾಗ ಮಾಡಿದ ಚಿಂತನ ಮಂಥನವೆಷ್ಟೋ ಕಾಣೆ! ಆದರೂ ಸಾಗುವಾನಿಯ ಜಾಗ ಅದಕ್ಕಾಗಿ ಮೀಸಲಿಡುವಲ್ಲಿ ಗೀತಾ ಯಶಸ್ವಿಯಾಗಿದ್ದಳು.
.
ಹೀಗೆ ವರುಷಗಳುರುಳಿ ದೂರದ ರೆಸಿಡೆಂಶಿಯಲ್ ಸ್ಕೂಲ್ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಗೀತಾ ತೆರಳುವುದು ಖಚಿತವಾಯಿತು.ಮನೆ-ಮಂದಿಯನ್ನು ಬಿಟ್ಟು ಹೋಗುವಷ್ಟೆ ದುಃಖ ತನ್ನ ಏಳು ವರ್ಷಗಳ ಸಂಗಾತಿಯನ್ನು ಬಿಡುವಾಗಲೂ ಇತ್ತು.ಕೊನೆಗೆ ಹಲವು ಮಾತು-ಮೌನ-ಕಸಿವಿಸಿಗಳ ಬಳಿಕ ಅಲ್ಲಿಗೆ ತೆರಳುವಂತಾಯಿತು. ಗಿಡ ಒಂಟಿಯಾದಂತಿತ್ತು...ಗೀತಳೂ!
.
ಇಷ್ಟರಲ್ಲಿ ಮತ್ತೊಂದು ಮಳೆಗಾಲವೂ ಬಂತು, ಮಳೆ ಸುರಿಯಿತು,ಮತ್ತದೇ ರಭಸದ ಗಾಳಿ! ಗಿಡ ತುಂಬ ಉದ್ದ ಬೆಳೆದಿತ್ತಾದರೂ ಅಗಲದ ಕಾಂಡ ಅದಕಿರಲಿಲ್ಲ! ಅದು ಮರವಾಗಿರಲಿಲ್ಲ! ಈ ಬಾರಿ ಅಪ್ಪ ಮತ್ತು ಅಜ್ಜ ಕೊಟ್ಟ ಆಧಾರವೂ ಗಾಳಿಗೆ ಉಳಿಯಲಿಲ್ಲ. ಗಾಳಿಯ ರಭಸಕ್ಕೆ ಗಿಡ ಬಗ್ಗಿ ಮುರಿಯಿತು!
.
ಆ ಜುಲೈ ತಿಂಗಳ ಮೊದಲ ವಾರದಲ್ಲಿ ಶಾಲೆಯಿಂದ ಪರ್ಮೀಷನ್ ಕೇಳಿ ಗೀತ ಮನೆಗೆ ಬಂದಾಗ ಗಿಡವಿರಲಿಲ್ಲ. ಈಗ ಕನಸಷ್ಟೇ ಉಳಿದಿದೆ.. ಅದೂ ನೆನಪಾಗಿ.ತೂ ಕರಮ್ ಕರ್ ಫಲ್ ಕಿ ಚಿಂತಾ ನ ಕರ್  ಎಂಬುದು ಅವಳಿಗೆ ಅರಿವಾಯಿತು. ಮುನ್ನಡೆಯುವ ಬೆಳಕಾಯಿತು. ಬದುಕಿನ, ಬೆಳವಣಿಗೆಯ  ಗುಟ್ಟಾಯಿತು. ಈಗ ಅದೇ ಜಾಗದಲ್ಲಿ ಅಪ್ಪ ಮಾವಿನ ಸಸಿ ನೆಟ್ಟಿದ್ದಾರೆ.

ಆ ಮಳೆಗಾಲದಲ್ಲೂ ಬೇರೆ ಯಾರಿಗಾದರೂ ಸಾಗುವಾನಿ ಗಿಡ ಸಿಕ್ಕಿರಬಹುದೇನೊ.ಇದೇ ಪ್ರೀತಿ ಬೇರೆ ಯಾರಲ್ಲಾದರೂ ಮೊಳಕೆಯೊಡೆದಿರಬಹುದೇನೊ..ಗಿಡ ಮತ್ತು ಕನಸುಗಳೆರಡೂ ಬೆಳೆದಿರಬಹುದೇನೋ..ಮಾತಿಲ್ಲದ ಪ್ರೇಮ ಚಿಗುರಿರಬಹುದೇನೋ!
.
ಇನ್ನೂ ಪ್ರತಿ ಮಳೆಗಾಲ ಯಾರಿಗಾದರೂ ಸಾಗುವಾನಿ ಸಿಗಲಿ..ಈ saga ಹೀಗೆಯೇ ಮುಂದುವರಿಯಲಿ, ಗೀತಳ ಸಾಗುವಾನಿಯ ನೆಲೆ ನನ್ನ ನೆನಪಿನಲ್ಲೆಂದಿಗೂ ಇರಲಿ!!!
ಜೊತೆಗೆ ಇದಕೆಲ್ಲ ನೆಪ - ನಿಮಿತ್ತ -ಕಾರಣ ಪ್ರೀತಿಯಾಗಿರಲಿ💚💚


~Geethalakshmi Kochi

Wednesday 6 May 2020

ಅವನಿ ಅವನಿಗಾಗಿ..

ಎಲೆ ನಭವೆ ಕೇಳಿ
ಬಿಡು ಎನ್ನ ಸಂದೇಶ
ನನ್ನೊಳಗೆ ಕುದಿಯುತಿಹ
ಭಾವ- ಆವೇಶ

ನೂರಾರು ಮಾತುಗಳು
ಮತ್ತೆ ಮೌನದ ಚಿತ್ತ
ಅತ್ತಿತ್ತ ಕೆಲ ನಲ್ಮೆ
ಮತ್ತೆ ತಾಳ್ಮೆಯ ಚಿತ್ರ

ತಲ್ಲಣದ ತಬ್ಬಿಬ್ಬು
ಜೊತೆಗಿಷ್ಟು ಆರೋಪ
ಮತ್ತಿಷ್ಟು ಮರುಳಾಟ
ಪ್ರಣಯ ಸಲ್ಲಾಪ

ನಿನ್ನ ಮುಗಿಲಿನ ನೀರ
ಸಾಗಿಸಿದೆ ಸಾಗರಕೆ
ಎನ್ನಂತರಗವನು
ಅದಕೆ ಬಸಿದೆ

ಗುಡ್ಡ ಕಾಡಿನ ಕವಿತೆ
ಕದಡಿಹುದು ಅದರಲ್ಲಿ
ಹಳ್ಳಿ ದಿಲ್ಲಿಯ ಗುಲ್ಲು
ಬೆರೆತಿಹುದು ಅಲ್ಲಿ

ಕಡಲೊಡಲು ಇರಬಹುದು
ಸಾರ ಅಭಿಸಾರದಲಿ
ಆವಿಯನು ನೀ ಸಲಹು
ವಾತ್ಸಲ್ಯದಲ್ಲಿ

ಮುಗಿಲುಗಟ್ಟಿದ ದಿಗಿಲ
ಕೇಳ ಬಯಸುವೆ ನಾನು
ಹಂಚಿ ಹಗುರಾಗೋಣ
ಸುಖ ದುಃಖವನ್ನು

ನಿನ್ನ ಪ್ರೀತಿಯ ಪರಿಯ
ದ್ರವವಾಗಿ ಹರಿಯಬಿಡು
ನಿನ್ನ ಮಾತನು ಎನಗೆ
ಮಳೆಯಾಗಿ ಕಳಿಸಿಕೊಡು

ಬಣ್ಣವಾಗಲಿ ಬದುಕು
ಬಳುವಳಿಯು ಒಲವು
ಉಭಯಕುಶಲೋಪರಿ 
ಮತ್ತೆ ಅಲ್ಲಿ ಸಾಂಪ್ರತವು

~Geethalakshmi Kochi

Wednesday 1 April 2020

ಅವರೆಂಬ ಮಧ್ಯಮರು

ಅಲ್ಲಿ 
ಕೂಗಿದೆ,ಅಳಲಿದೆ
 ಕರುಳಿನ ತೊಳಲಾಟವಿದೆ
ಅದೆಷ್ಟೋ ವರ್ಷಗಳ ತಪಸ್ಸಿದೆ
ಕೊಳೆಯಾದ ಪಂಚೆಯ ಎಡೆಯಲ್ಲಿ, 
ಉಸಿರುಗಟ್ಟಿದ ಆಸೆಗಳಿವೆ !

ಅಲ್ಲಿ,
ಬದುಕು ಬಿದಿಗೆ ತುಂಬಲಿಲ್ಲ, 
ಬಸಿರು ಬದುಕಲಿಲ್ಲ
ಬಸಿಯಲಿಲ್ಲ , ಬೆಸೆಯಲಿಲ್ಲ
ಬಣ್ಣಿಸುವಷ್ಟು ಬಣ್ಣಗಳಿಲ್ಲ

 ಆದರೂ ಇವರು ಸಮರ್ಥರು!
ಇಲ್ಲಗಳನ್ನು ಅಲ್ಲಗಳೆದು
ಇಂಗಿದ ಇಂಗಿತಗಳ ಜೊತೆಗೆ 
ರಾಜಿಮಾಡಿದ್ದಾರೆ!
ನೀವು ಕೊಡುವ ಮಾತು,
ಮೌನವಾಗಿ ಮರೆತಿದ್ದಾರೆ,
ಅವರ ಬೆವರಿನ ಘಮಕೆ
ನೀವು  ಬಂಗಲೆ ಕಟ್ಟಿದರೂ
ಅವರು ದನಿ ಎತ್ತಲಾರರು,
ರಾಜೀನಾಮೆ ಬಯಸಲಾರರು!

ಈ ಅವರುಗಳು ಯಾರೆಂದು ಪ್ರಶ್ನೆ ಯೇ ಏಳುವುದಿಲ್ಲ
ಇವರು ಸರಾಸರಿಯ ಅಂಕಿಅಂಶಗಳಲ್ಲಿ ಸಾರಾಸಗಟು
ಸಪಾಯಿಯಾಗಿದ್ದಾರೆ
ಆದರೂ ಸಿಪಾಯಿಯಂತಿದ್ದಾರೆ
ಬೆಳವಣಿಗೆಗೆ ಬೆಳೆಯದೇ ಹೋದರು, ಬಲಿತಿದ್ದಾರೆ
ಮತ್ತು ನಿಮ್ಮನ್ನು ಬೆಳೆಸುತ್ತಿದ್ದಾರೆ!!

~Geethalakshmi Kochi

Friday 27 September 2019

ಹುಡುಕಾಟ

ಅಲ್ಲಿ ಇಲ್ಲಿ ಸುತ್ತಲಲ್ಲಿ
ಗಲ್ಲಿ ಗಲ್ಲಿ ಸುತ್ತುವಲ್ಲಿ
ಮೆಲ್ಲ ದಾಟಿ ಹುಲ್ಲ ಹಾದಿ
ಹುಡುಕಿ ಹರುಷ ಸೆಲೆಯನಲ್ಲಿ

ಮತ್ತೆ ಸುತ್ತಿ ಕತ್ತಲಲ್ಲಿ
ಕಂಡು ಬೆಳಕ ಥಳುಕು ಅಲ್ಲಿ
ಬಿಡದೆ ದುಡಿದು ನಡೆದು ದೂರ
ಸೇರಲಿಲ್ಲ ಹರುಷದೂರ

ಬೆಳೆವ ದಾರಿ ಮುಗಿಯುತಿಲ್ಲ
ಮರಳಿ ತೆರಳೊ ಧೈರ್ಯವಿಲ್ಲ
ಸ್ಥಾಯಿಯಾಗಿ ಸ್ಥೈರ್ಯ ತಂದೆ
ಸ್ತಬ್ದದಲ್ಲಿ ಸುಖವನುಂಡೆ

ಕಣ್ಣ ಮುಚ್ಚಿ ಜಗವ ಕಂಡೆ
ಬದುಕು ಭಾವ ಮೀಟುತಿತ್ತು
ಎದೆಯ ಕದವ ಮೆಲ್ಲ ತೆರೆದೆ
ಅಲ್ಲಿ ಜೀವ ಕುಣಿಯುತಿತ್ತು

-Geethalakshmi kochi

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...